5.7.08

ಜಗನ್ನಾಥನ ತಬ್ಬಲಿ ಮಕ್ಕಳು

[ಈ ಸಾವಿನ ಸುದ್ದಿ ನೋಡಿ]

ಜೀವ ದಿಟ ಅನಿಸಲಿಲ್ಲವೇ ನಿನಗೆ?
ದೇವ ಸುಳ್ಳು ಅನಿಸಲಿಲ್ಲವೆ ನಿನಗೆ?
ನಂಬಿಕೆಯೇ ಎಲ್ಲ ಮೀರಿದ ಸತ್ಯ ನಿನಗೆ
ಬುಡವಿಲ್ಲದಿದ್ದರೂ ಅಲ್ಲವೆ?

ಆ ರಥದಲ್ಲಿ ಕೂತ ಗೊಂಬೆಯ
ಒಳಗೇನೋ ಕಂಡಿತೆನ್ನುವ
ಕೋಟಿ ಕೋಟಿ ಜನ ಕುರುಡುರೇ?
ಅನುಮಾನ ಸಹಜ
ಇರಬಹುದು ಎಂದೇಕೆ ಅನಿಸಲಿಲ್ಲ ನಿನಗೆ?

ನಿನ್ನ ಯಾವುದೋ ತಬ್ಬಲಿತನ
ಕಳಕೊಳ್ಳುವ ತವಕದಲ್ಲಿ
ನಿನ್ನ ಮಕ್ಕಳೀಗ ತಬ್ಬಲಿ

ರಥಚಕ್ರಕ್ಕೆ ಸಿಕ್ಕಿ ಸಾಯುವ ಪುಣ್ಯವಿಲ್ಲದಿದ್ದರೆ
ರಥವೆಳೆಯುವ ಕಾಲಿಗೆ ಸಿಕ್ಕಾದರೂ ಸಾಯಬೇಕು
ಮಕ್ಕಳನ್ನು ತಬ್ಬಲಿ ಮಾಡಬೇಕು.

ಅವರು
ತಬ್ಬಲಿಯಾಗಿ ರಥವೆಳೆಯುವ ಕೈಗಳಾಗಬೇಕು
ತುಳಿದು ಕೊಲ್ಲುವ ಕಾಲುಗಳಾಗಬೇಕು
ಅಯ್ಯೋ,
ರಥಚಕ್ರ ಮಾತ್ರ ತಿರುಗುತ್ತಲೇ ಇರಬೇಕು.

No comments: